ಬುಧವಾರ, ಸೆಪ್ಟೆಂಬರ್ 9, 2020

*ಸಮಚಿತ್ತದ ಸಮನ್ವಯ ಸ್ಥಿತಿ*



ಜಾತಿ, ಮತ, ಕುಲ, ಪಂಗಡಗಳೆಲ್ಲವನ್ನೂ ಬದಿಗಿಟ್ಟು ಒಮ್ಮೆ ಸಾವಧಾನವಾಗಿ ಯೋಚಿಸೋಣ.
ನಮ್ಮ ಈ ಗಳಿಗೆಯ ಸ್ಥಿತಿ ಹೇಗಿದೆ? ಯಾವ ಉದ್ದೇಶಕ್ಕಾಗಿ ನಾವು ಪ್ರಾರ್ಥನೆ, ಪೂಜೆಪುನಸ್ಕಾರ, ಆಚಾರವಿಚಾರ, ಸದ್ಗುಣ ಪಾಲನೆ, ನೀತಿನಿಯಮಗಳ ಅಂತರ್ ಪ್ರಯಾಣ, ತ್ಯಾಗಸೇವೆಗಳ ಸಂಸರ್ಗ, ಸದ್ಗತಿಯ ಚಿಂತನೆಗಳಂತಹ ಈ ಲೋಕಕ್ಕೆ ನಿಷ್ಠೂರವಾದ ಕಾರ್ಯಗಳನ್ನು ಕೆಲವರು ಕೈಗೊಳ್ಳುವುದೇಕೆ?
ಮೈಮನಗಳನ್ನು ದಂಡಿಸಿಕೊಂಡು ಬದುಕಿದರೆ ಅದರಿಂದಾಗುವ ಒಳಿತಾದರೂ ಏನು?!
ಸುಖ-ಸಂತೋಷ-ನೆಮ್ಮದಿಯನ್ನು ತೊರೆದು ಬಾಳುವುದರಿಂದ ಸಾಧಿಸುವುದಾದರೂ ಏನನ್ನು?
ಸತ್ತ ಮೇಲೆ ಏನಾಗುತ್ತೇವೆ ಎಂಬ ಸತ್ಯ ನಿಜವಾಗಲೂ ಯಾರಾದರೂ ಕಂಡಿದ್ದಾರೆಯೇ? ಹೇಳಿದ್ದಾರೆಯೇ?
ಸತ್ತವರು ನಮಗಾಗಿ ದೇವರಿಂದ ನಮ್ಮ ಅಗತ್ಯಗಳನ್ನು ಬೇಡಿ ಕೊಡುತ್ತಾರೆ ಎಂದು ತಿಥಿ, ಸ್ಮರಣೆಗಳನ್ನು ಮಾಡುವುದಾದರೆ ಯಾವ ರೀತಿ? ಸತ್ತವರಿಂದ ಎಲ್ಲವೂ ಸಾಧ್ಯ ಎಂದ ಮೇಲೆ ಮಹಾತ್ಮರ, ಪುಣ್ಯಪುರುಷರ, ನ್ಯಾಯನೀತಿಗಾಗಿ ಪ್ರಾಣತ್ಯಾಗ ಮಾಡಿದ.... ಆತ್ಮಗಳು ಏನು ಮಾಡುತ್ತಿವೆ. ಇಂತಹ ಚಿಂತನೆಗಳು ಕಾಡಿಸುವುದು ಸಹಜ.
ಆದರೂ ಅಂತಹ ಪ್ರಶ್ನೆಗಳನ್ನು ಅವಿತ್ತಿಟ್ಟು ದೇವರು, ಧರ್ಮ, ಧರ್ಮಗಳ ಕಟ್ಟುನಿಟ್ಟಿನ ಪಾಲನೆ, ಮುಕ್ತಿಯ ಅಭಿಲಾಷೆ, ಭಯಭಕ್ತಿಗಳ ನಿಮಿತ್ತ ಉತ್ತರ ಕಂಡುಕೊಳ್ಳಲಾಗದೆ ಕೊನೆಯುಸಿರಿನವರೆಗೂ ಬದುಕು ಸಾಗಿಸುತ್ತೇವೆ. ಪವಿತ್ರಗ್ರಂಥ, ಬೋಧನೆಗಳ ಮೇಲಿನ ಅಚಲ ವಿಶ್ವಾಸದಿಂದ ಅಗೋಚರ ದೈವತ್ವದ ಸ್ಪರ್ಶದಲ್ಲಿ ಒಂದಾಗಲು ಬಯಸುತ್ತೇವೆ.
ಏಕಾಂತದಲ್ಲಿ ಕುಳಿತು ಪ್ರಸ್ತುತವನ್ನು ಮಾತ್ರ ಚಿಂತಿಸಿದರೆ ಕೆಲವೊಮ್ಮೆ ಎಲ್ಲವೂ ನಾಟಕೀಯವಾಗಿ ಭಾಸವಾಗುತ್ತವೆ. ಏಕೆಂದರೆ ಬದುಕು ದಾರಿ ನಮ್ಮ ಇಷ್ಟಕ್ಕೆ ತದ್ವಿರೋಧವಾಗಿರುತ್ತದೆ.
ನೈಜ ಪ್ರೀತಿಯನ್ನು ತೋರಿಸಿರುವುದಿಲ್ಲ. ಕ್ಷಮಿಸುವ ಮನಸ್ಥಿತಿ ಇರೋದಿಲ್ಲ. ಸಿರಿತನ, ಕೀರ್ತಿ, ಪ್ರತಿಷ್ಟೆಗಳ ಬಾಲ ಹಿಡಿದಿರುತ್ತೇವೆ.
ಅಂತರಂಗದ ಮಾತಿಗೆ ಕಿವಿಗೊಟ್ಟಿರುವುದಿಲ್ಲ.
ನಮ್ಮನ್ನು ನಾವು ಹೆಚ್ಚಿಸಿಕೊಳ್ಳುವುದರಲ್ಲೇ ಬಾಳ ಹಾದಿಯನ್ನು ಸವೆಸಿರುತ್ತೇವೆ.
ಧರ್ಮ ಬೋಧಿಸುವುದು ಲೋಕದಲ್ಲಿ ಎಲ್ಲರೂ ದೇವರ ಮಕ್ಕಳು.
ಸಮಾನತೆ-ಸಮಾಧಾನ-ಸಂತೋಷ. ಇಷ್ಟನ್ನು ಬಿಟ್ಟು ಬೇರೆ ಏನೇ ಪುಣ್ಯಕಾರ್ಯಗಳನ್ನು ಮಾಡಿದರು, ಗ್ರಂಥಗಳನ್ನು ಓದಿ, ಬೋಧಿಸಿದರೂ ಅವೆಲ್ಲವೂ ಬಹುಶಃ ನಿಷ್ಪ್ರಯೋಜಕವೆಂಬುದು ಎಲ್ಲರಿಗೂ ಅರಿವಿದೆ.
ಈ ಅರಿವಿನ ಅಳತೆಯಲ್ಲಿ ಅಗೋಚರ ಅಂತರಾತ್ಮನ ಅನುಗ್ರಹದಲ್ಲಿ ಅನುರಾಗದ ಸೆಲೆಯಾಗಿರಲು ಪ್ರಯತ್ನಿಸೋಣ.
ಆಂತರ್ಯದಿಂದ ಎಲ್ಲರೊಂದಿಗೆ ಸಮಾನತೆಯಲ್ಲಿ ಬಾಳಿ ನಿಜ ಮನುಷ್ಯರಾಗೋಣ.
'ನಿನ್ನಂತೆಯೆ ನೆರೆಹೊರೆಯವರನ್ನು ಪ್ರೀತಿಸು" ಎಂದು ಪ್ರಭು ಹೇಳಿದ್ದು ಇದಕ್ಕೆ ಇರಬಹುದು!

- ರಾಬರ್ಟ್ ಕವನ್ರಾಗ್, ಮೈಸೂರು-

 'ನಾಳೆ ಎನುವುದು ಇರುವುದೇ?!'

ಕೇರಳ, ಮಡಿಕೇರಿಗಳಿಗಿಂತಲೂ ಹೆಚ್ಚಿನ ಅನಾಹುತಗಳನ್ನು ಸೃಷ್ಟಿಸಿದ, ಸೃಷ್ಟಿಸುತ್ತಿರುವ ಅತಿವೃಷ್ಟಿ, ಜಲಪ್ರಳಯದ ಪರಿಣಾಮಗಳನ್ನು ನೋಡಿದ್ದೇವೆ.
ಒಂದು ಕಡೆ ಮುಗಿಯಿತು ಎನ್ನುವಾಗಲೇ ಮತ್ತೊಂದು ಕಡೆ ಅದರ ಧರೆಯ ಶುದ್ದಿಕರಣ ಕರ್ತವ್ಯ ಆರಂಭವಾಗಿರುತ್ತದೆ.
ಎಷ್ಟರಮಟ್ಟಿಗೆ ಧರೆಯು ತನ್ನನ್ನು ತಾನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೋ ಅದಕ್ಕಿಂತಲೂ ಅಧಿಕವಾಗಿ ಮಾನವ ತನ್ನಳಿವನ್ನು ತಾನೇ ದೃಢಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾನೆ.
ಇಂದಿನ ಸೂಕ್ಷ್ಮವಾದ ತೀವ್ರತರವಾದ ಬದಲಾವಣೆಯ ಯುಗದಲ್ಲಿ ಈ ಕ್ಷಣವೇ ಕೊನೆಯಾಗಿರಬಹುದೆಂದು ಆತನಿಗೆ ಗೊತ್ತಿದೆ.
ಇದನ್ನೂ ಕಡೆಗಣಿಸಿ ಬಿಗಿ ಬಂಧನದ ತಿಳಿಯಾದ ಮುಖ ಚಹರೆಯಲ್ಲಿ ಈ ಕ್ಷಣವಿದ್ದು ಮುಂದಿನ ಯುಗಗಳ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.
ತನ್ನನ್ನು ತಾನು ಹೆಚ್ಚಿಸಿಕೊಂಡು ತನ್ನಿಂದಲೇ ಎಲ್ಲವೂ ಎಂಬಂತೆ ತೋರ್ಪಡಿಸುವ ಕಾರ್ಯಗಳಲ್ಲು ನಿರತನಾಗಿದ್ದಾನೆ.
ಅದರೆ ಆತನಿಗೆ ಗೊತ್ತು ತನ್ನಿಂದೆಲ್ಲವನ್ನೂ ಮಾಡಲು ಅಸಾಧ್ಯವೆಂದು!
ಆತ್ಮೀಕತೆ, ಸಾಮಾಜಿಕ, ದೈಹಿಕ, ಮಾನಸಿಕ ಸ್ವಸ್ಥತೆಗಳ ಎಲ್ಲಾ ಒಂದಿಲ್ಲೊಂದು ವಿಷಯಗಳಲ್ಲಿ ಪರಿಣತಿಯನ್ನು ಪಡೆದಿದ್ದರೂ ಅದರ ಪಾಲನೆಯಲ್ಲಿ ಅಪೂರ್ಣನಾಗಿ ಸೋಲನ್ನೊಪ್ಪಿಕೊಳ್ಳದೆಯೇ ಗೆಲುವನ್ನು ಸಾಧಿಸಿದ್ದೇನೆಂದು ಬೀಗುತ್ತಿದ್ದಾನೆ.
ವೈಜ್ಞಾನಿಕತೆಯ ಅಪರಿಮಿತ ವೇಗವು ಆತನನ್ನು ಅರಿವಿಲ್ಲದಂತೆ ಇಂಧನರಹಿತ ವಾಹನದಂತೆ ನಿಂತಲ್ಲೇ ನಿಲ್ಲಿಸಿಬಿಟ್ಟಿದೆ.
ದೇಹದಲ್ಲಿ ಹೋಗಲಾಡಿಸದ ಬಾಧೆಗಳನ್ನೂ ಸಹಿಸಿ ಭಾರವಾದ ಹೆಜ್ಜೆಗಳನ್ನು ಪ್ರತಿ ಕ್ಷಣಗಳಲ್ಲೂ ಇಡುತ್ತಿದ್ದಾನೆ.
ಉದ್ದೇಶವನ್ನೇ ಸ್ಪಷ್ಟವಾಗಿ ಮನನ ಮಾಡಿಕೊಳ್ಳದೆ. ಮಾಡಿಕೊಂಡ ಅಸ್ಪಷ್ಟ ನಿರ್ಧಾರಗಳತ್ತ ನಿರ್ಲಿಪ್ತನಾಗಿ ಸರಿಯುತ್ತಿದ್ದಾನೆ.
ಕಾಲ ಅವನ ಹಿಡಿತದಲ್ಲಿಲ್ಲದಿದ್ದರೂ ಕಾಲವನ್ನು ಕಾಣುತ್ತಾನೆ. ಅಂತರಾಳ ಅಂಕೆಯಿಲ್ಲದೆ ಅಲೆಯುತ್ತಿದ್ದರೂ ಅಲುಗದ ಅಚಲನೆಂದುಕೊಂಡಿದ್ದಾನೆ. ಮುಂದಿನ ಕ್ಷಣ ತನ್ನದ್ದಲ್ಲವೆಂದುಕೊಂಡಿದ್ದರೂ ತನ್ನ ಮುಂದಿನದೆಲ್ಲವೂ ತನ್ನದೇ ಎಂದು ಮೆರೆಯುತ್ತಿದ್ದಾನೆ.
ಅಜ್ಞಾನದ ಮಾತುಗಳು, ಅರ್ಥವಿಲ್ಲದ ಆಲೋಚನೆಗಳು, ಆರೋಗ್ಯವಿಲ್ಲದ ಚೇತನಗಳಾಗಿ ಮಾರ್ಪಟ್ಟಿವೆ. ತನ್ನನ್ನು ತಾನೇ ಹೆಚ್ಚಿಸಿಕೊಂಡರು, ತನ್ನಲ್ಲೇ ತಾನು ನಂಬಿಕೆ ಕಳೆದುಕೊಂಡು ಬಾವಲಿಗಳಂತೆ ಹೊಸತನ ತೋರಿಸುತ್ತಿದ್ದಾನೆ.
ನಾಳೆ ಎನುವುದು ಇದ್ದರೂ ಅದರಲ್ಲಿ ನಾವಿರುತ್ತೇವೆಯೋ ಎಂಬ ಚಿಂತನೆಗಳಿಗೆ ದಾರಿ ಮಾಡುವುದು ಒಳಿತು. ಯಾರದೋ ಚೈತನ್ಯ ನುಡಿಗಳು ನಮ್ಮಲ್ಲಿ ನುಡಿಗಳಾಗಿ ನೆನಪೊಳಗಿದ್ದರೆ ಸಾಲದು. ಅದು ಕ್ರಿಯೆಯ ಚಾಲನೆಯಲ್ಲಿರಬೇಕು.



- ರಾಬರ್ಟ್ ಕವನ್ರಾಗ್, ಮೈಸೂರು -

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...