'ನೆನಪುಗಳ ಮಡಿಲಿನಲಿ ಪಿಸುಮಾತುಗಳು!'
ಆ ಕ್ಷಣಗಳು ಮತ್ತೆ ಬರುತ್ತವೆಯೇ ಎಂಬ ಸವಿಯ ಬಯಸುವ ಮಿಡಿತಗಳು ಅನೇಕ.
ಆ ಆತಂಕಕಾರಿ ಗಳಿಗೆಯು ವೈರಿಗೂ ಬಾರದಿರಲಿ ಎಂಬ ತುಡಿತಗಳು ಅಂಕೆಗೆ ಸಿಗದಷ್ಟು ಅಪಾರ.
ಜೀವನದಲಿ ಮುಟ್ಟಿ ಬಂದ ಅನುಭವಗಳು ನೆನಪುಗಳ ಸರಪಳಿಯಾಗಿಯೋ ಅಥವಾ ಚೆಂದದ ಮಣಿಮಾಲೆಗಳಾಗಿಯೂ ಕೊರಳಲಿ ಸದಾ ತೂಗುತ್ತಿರುತ್ತವೆ.
ಕೊರಗುತ್ತಾ ಸೊರಗುವ ಮನಸ್ಸುಗಳೊಂದಿಗೆ, ಸುಖದ ಸವಿಯಲ್ಲಿ ಆನಂದಿಸುವ ಹೃದಯವು ಭುಜದ ಮೇಲೆ ಕೈಹಾಕಿ ಹೆಜ್ಜೆ ಹಾಕುತ್ತವೆ.
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನದ ಗಂಟೆಯಲ್ಲೂ ನೆನಪುಗಳ ಕಂಪನದಲಿ ಅನುಮಾನದಲ್ಲಿಯೆ ಸಂಚರಿಸುತ್ತಾನೆ.
ನೋವಿರಲಿ ನಲಿವಿರಲಿ ತನ್ನೊಳಗಿನ ಬದುಕಿನ ಚಿತ್ರಣಗಳನ್ನು ಇತರರ ಮನದ ಪರದೆಗಳ ಮೇಲೆ ರೂಪಿಸಲು ತವಕಿಸುತ್ತಲೇ ಇರುತ್ತಾನೆ.
ಆನಂದಬಾಷ್ಪ ಚಿಮ್ಮಿಸುವ ಘಟನೆಗಳನ್ನು ಅಪ್ಪುಗೆಯಲ್ಲಿ ಚಿತ್ರಿಸಿದರೆ, ಮರುಗುವ ಕಣ್ಣೀರಿನ ಮಂಜಾಗಿಸುವ ಅನುಭವಗಳನ್ನು ಮಡಿಲಿನ ಮಡಿಕೆಯೊಳಗೆ ಅವಿತ್ತಿಡಲು ತವಕಿಸುತ್ತಾನೆ.
ಅನುಭವಗಳ ಅನುಬಂಧಿತಗಳಿಂದ ಮೂಡುವ ಅಕ್ಷರಗಳ ಪದಪುಂಜಗಳನ್ನು ಪ್ರೀತಿಸುವರೊಂದಿಗೆ, ಪ್ರೇಮದಲಿ ಮುತ್ತಿಡುವವರೊಂದಿಗೆ, ಒಲವಿನ ಬಾಂಧವ್ಯಗಳೊಂದಿಗೆ ಪೇರಿಸಿಟ್ಟು ನೆಮ್ಮದಿಯಲ್ಲಿ ಪವಡಿಸುವವರು ನಿಟ್ಟಿಸಿರು ಬಿಡುತ್ತಾರೆ.
ಇಂತಹದ್ದೇ ಪದಪುಂಜಗಳನ್ನುಕೇಳುವವರು ಕಾಣದಿದ್ದಾಗ ಅದೇ ಕೊರಗಿನಲ್ಲಿ ಅನೇಕರು ಅಸಹನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ದುಃಖಿಸುತ್ತಾರೆ.
ಇವರು ತಮ್ಮ ಅಂತಿಮ ಬದುಕಿನ ದಿನಗಳನ್ನು ಏಕಾಂತದಲ್ಲಿ ಪೇಚಾಡುತ್ತಲೇ ಕಳೆಯುತ್ತಾರೆ. ಕೊನೆಗಾಲದಲ್ಲಾದರೂ ನೆನಪುಗಳ ಮಡಿಲಿನಲಿ ಪಿಸುಮಾತುಗಳನ್ನು ಆಲಿಸುವ ಅವಕಾಶ ದೊರಕಲಿ ಎಂಬ ಆಶಾಭಾವದಿಂದ ದಿನವನ್ನು ದೂಡುತ್ತಾರೆ.
ಅನೇಕರು ಹುಚ್ಚರಂತೆ ನೆಮ್ಮದಿಯನ್ನು ಹುಡುಕಿ ಹೋಗುವುದು ಈ ಕಾರಣದಿಂದಲೇ!
ಅನೇಕ ಬಾರಿ ಇಂತವರು ಶೂನ್ಯತೆಯಲ್ಲಿ ಖಿನ್ನರಾಗುವರು. ತಮ್ಮನ್ನೇ ಕಳೆದುಕೊಳ್ಳುತ್ತಾರೆ.
ಇದಕ್ಕೆ ಸಿಲುಕಬಾರದೆಂದರೆ ಅವರಿಗೆ,
* ಪ್ರೇಮಿಸುವ ಸಂಗಾತಿ ಇರಬೇಕು.
* ಪ್ರೀತಿಸುವ ಒಡಹುಟ್ಟಿದವರು, ಬಂಧುಬಳಗವಿರಬೇಕು.
* ಒಲವಿನ ಗೆಳೆತನದ ಪ್ರತ್ಯಕ್ಷ ಬೆನ್ನೆಲುಬಿರಬೇಕು.
* ಆತ್ಮೀಯತೆಯಲ್ಲಿ ಅಪ್ಪುವ ಪರಿಚಿತರಿರಬೇಕು.
* ಪ್ರೇರಣೆಯ ನಿಸ್ವಾರ್ಥ ನಗುವಿನ ಸಹಪಾಠಿ ಸಹೋದ್ಯೋಗಿಗಳಿರಬೇಕು.
* ಸಹಕರಿಸುವ ಉದಾರ ಹೃದಯವಂತರಿರಬೇಕು.
ಇವೆಲ್ಲವನೂ ಒಟ್ಟಿಗೆ ಪಡೆಯಲು ಅಸಾಧ್ಯವೆನಿಸಿದರೂ ಇದರಲ್ಲಿ ಒಂದಾದರು ಸಿಗುವಂತಿರಬೇಕು.
ಒಂದು ವೇಳೆ ಇದ್ಯಾವುದು ನಮ್ಮ ಹತ್ತಿರ ಬರದಿದ್ದಾಗ ಇವುಗಳನ್ನೆಲ್ಲವನ್ನೂ ಮೀರಿಸುವ ಪ್ರಭುವಿನ ಕರುಣೆಯ ಕರಗಳಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿರಬೇಕು.
ಪ್ರಭುವಿನಲ್ಲಿ ನಂಬಿಕೆಯಿರಬೇಕು.
ಆಗ ಮಮತೆಯ ತಾಯಿಯ ಮಡಿಲನ್ನೂ ಮೀರಿಸುವ ದೈವತ್ವ ಸಮಾಧಾನದ ಮಡಿಲಿನಲಿ
ನೆನಪುಗಳ ಸವಿ ಮಾತುಗಳನ್ನಾಡುವ ಮಹಾ ಭಾಗ್ಯ ನಮಗೆ ದೊರಕುತ್ತದೆ.
- ರಾಬರ್ಟ್ ಕವನ್ರಾಗ್, ಮೈಸೂರು -