'ನಮ್ಮನ್ನೇ ನಾವು ಮಾರಿಕೊಳ್ಳುವ ಅಧೋಗತಿ!'
ನೇತ್ರದಾನ, ಕಿಡ್ನಿ ದಾನ, ಅಂಗಾಂಗ ದಾನಗಳು ಸ್ವ ಇಚ್ಛೆಯಿಂದ ತಮ್ಮನ್ನೇ ಅರ್ಪಿಸಿಕೊಳ್ಳುವುದಾಗಿದೆ.
ಇದು ಒಬ್ಬ ವ್ಯಕ್ತಿಯ ಮರಣದ ನಂತರದ್ದಾಗಿದೆ.
ಇವೆರಡರ ಕಾಲ ಅದಲು ಬದಲಾದರೆ ಏನೋ ವಿಫಲತೆ ಸಂಭವಿಸಿದೆ ಎಂಬುದು ಖಚಿತ.
ಜೀವಂತವಾಗಿ ಇರುವಾಗಲೇ ಪ್ರಾಣ ಸ್ನೇಹಿತನಿಗಾಗಿಯೊ, ಒಡಹುಟ್ಟಿದವರಿಗಾಗಿಯೊ, ಸಂಗಾತಿ ಹೆತ್ತವರಿಗಾಗಿಯೊ ತಮ್ಮ ಕಿಡ್ನಿಯನ್ನು ದಾನ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಸಾಯುವ ಕೊನೆಯ ಗಳಿಗೆಯಲ್ಲಿ ತಮ್ಮನ್ನೇ ದಾನವಾಗಿ ಕೊಟ್ಟ ಉದಾಹರಣೆಗಳೂ ಇವೆ.
ಆದರೆ ಜೀವನದಲ್ಲಿ ಸೋತಿದ್ದೇವೆ, ಬದುಕುವ ದಾರಿ ಕಾಣುತ್ತಿಲ್ಲ, ಒಂಟಿತನ ಕಾಡಿಸುತ್ತಿದೆ .... ಇಂತಹ ಕಾರಣಗಳಿಂದ ಅನೇಕರು ಅಂಗದಾನಕ್ಕೆ ಸಿದ್ಧರಾಗಿಬಿಡುತ್ತಾರೆ.
ಹಣದ ಸಂಕಷ್ಟದಿಂದ ಸಾಲವನ್ನು ತೀರಿಸಲು ಸಾಧ್ಯವಾಗದೆ ನರಳುತ್ತಿರುವವರಲ್ಲಿಅನೇಕರು ಇಂತಹ ಕೃತ್ಯಕ್ಕಿಳಿಯಿತ್ತಾರೆ.
ಇದು ಸೂಕ್ತವೇ? ಎಂದು ಯೋಚಿಸುವುದಕ್ಕಿಂತಲೂ ಇವೆಲ್ಲವೂ ಅಜ್ಞಾನದ, ಅತಿರೇಕದ ಬುದ್ಧಿಹೀನ ಕೆಲಸವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಇಂತಹವರು,
@ ತಮ್ಮನ್ನು ತಾವು ಮೊದಲು ಗೌರವಿಸಿ, ಪ್ರೀತಿಸಿಕೊಳ್ಳಬೇಕು. ಏಕೆಂದರೆ ಅಂಗಾಂಗಗಳನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಅಸಾಧ್ಯ.
@ ಎಲ್ಲಾ ಸಮಸ್ಯೆಗಳಿಗೂ ಪರಿಹಾರ, ಕಷ್ಟಕ್ಕೆ ಅಂತ್ಯವಿದೆ ಎಂಬ ವಿಶ್ವಾಸವಿರಬೇಕು.
@ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ.
@ ತಮಗಿಂತಲೂ ತೊಂದರೆ, ಕಷ್ಟದಲ್ಲಿರುವವರನ್ನು ಅದರಲ್ಲೂ ಆಸ್ಪತ್ರೆ, ಅನಾಥಾಶ್ರಮ, ಅಂಗಹೀನತೆ, ಬುದ್ಧಿಮಾಂದ್ಯತೆಯವರನ್ನು ಭೇಟಿಯಾಗಬೇಕು.
@ ತಮ್ಮಲ್ಲಿರುವ ಧನಾತ್ಮಕತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಅಭಿವೃದ್ಧಿಪಡಿಸಿಕೊಂಡು ಚಿಂತೆಗಳಿಗೆ ಮುಕ್ತಾಯ ಹಾಡುವುದು.
@ ಪ್ರೀತಿ, ಕ್ಷಮೆ, ಸೇವೆಗಳಂತ ಅಂತರಿಕ ತೃಪ್ತಿಗೆ, ಸಮಾಜಮುಖಿ ಕಾರ್ಯಗಳಲ್ಲಿ ಸಮಯ ಕಳೆಯುವುದು.
@ ಆಧ್ಯಾತ್ಮಿಕತೆಯ, ಸಾಧನೆಯ ಹಾದಿಯಲ್ಲಿ ನಡೆಯುವುದು.
ಇಂತಹ ಒಳ್ಳೆಯ ವಿಷಯಗಳತ್ತ ತಮ್ಮನ್ನು ತಾವು ಕಂಡುಕೊಂಡರೆ, ಇಲ್ಲಸಲ್ಲದ ಯೋಚನೆಗಳು ಮಾಯವಾಗಿ ಮನಸ್ಸು ನಿರ್ಮಲಗೊಂಡು ಬದುಕಿಗೆ ಅರ್ಥ ದೊರಕುತ್ತದೆ.
ಹುಟ್ಟಿದವರು ಒಂದು ದಿನ ಉಸಿರನ್ನು ತ್ಯಜಿಸಲೇಬೇಕು, ಆದರೆ ತಮ್ಮನ್ನು ತಾವೇ ಸಂಪೂರ್ಣ ಶೂನ್ಯ ಎಂದುಕೊಳ್ಳಬಾರದು. ಏಕೆಂದರೆ ದೇವರ ಪ್ರೀತಿಯ, ದೇವರ ರೂಪದ ಮಾನವರಿಗಾಗಿಯೇ ಸಮಸ್ತ ಸೃಷ್ಟಿಯೂ ಉಂಟು ಮಾಡಲ್ಪಟ್ಟಿತು. ಯಾವ ಕಾರಣಕ್ಕೂ ನಮ್ಮನ್ನು ನಾವು ಮಾರಿಕೊಳ್ಳುವುದು ಸಲ್ಲದು. ಏಕೆಂದರೆ
ಮಾನವನಿಗೆ ತನ್ನನ್ನು ತಾನು ಮಾರಿಕೊಳ್ಳುವ ಅಥವಾ ಅಂತ್ಯಗೊಳಿಸಿಕೊಳ್ಳುವ ಯಾವುದೇ ಹಕ್ಕಿಲ್ಲ.
: ರಾಬರ್ಟ್ ಕವನ್ರಾಗ್, ಮೈಸೂರು :